ನಾನು ಯಾವತ್ತೂ ಅಪ್ಪನಿಗೆ ಒಳ್ಳೆ ಮಗ ಆಗಲೇ ಇಲ್ಲ..! ಇಡಿ ದಾಳಿ ಬೆನ್ನಲ್ಲೇ ಕಣ್ಣೀರಿಟ್ಟ ಕಾಂಗ್ರೆಸ್ ಮ್ಯಾನ್ ಮೊಹಮ್ಮದ್ ನಲಪಾಡ್!
ವರದಿಗಾರರು (Reporter)
Hemanth Rajashekar01:24 AM IST

ಬೆಂಗಳೂರು: “ನಮ್ಮ ತಂದೆ-ತಾಯಿಗೆ ನಾನು ಯಾವತ್ತೂ ಒಬ್ಬ ಒಳ್ಳೆಯ ಮಗನಾಗಲು ಸಾಧ್ಯವಾಗಲೇ ಇಲ್ಲ. ಅವರಿಗೆ ಯಾವಾಗಲೂ ನನ್ನಿಂದ ಕೆಟ್ಟ ಹೆಸರೇ ಬಂದಿದೆ…” – ಇದು ಇಡಿ (Enforcement Directorate) ದಾಳಿಯ ನಂತರ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಸುದ್ದಿಗೋಷ್ಠಿಯಲ್ಲಿ ಬಿಕ್ಕಳಿಸುತ್ತಾ ಆಡಿದ ಮಾತುಗಳು.
ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಅವರ ಪುತ್ರರಾದ ಮೊಹಮ್ಮದ್ ನಲಪಾಡ್ ಮತ್ತು ಉಮರ್ ನಲಪಾಡ್ ನಿವಾಸಗಳ ಮೇಲೆ ಇಡಿ ಅಧಿಕಾರಿಗಳು ಸತತ 21 ಗಂಟೆಗಳ ಕಾಲ ನಡೆಸಿದ ಸುದೀರ್ಘ ದಾಳಿಯು ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಬಿಟ್ಕಾಯಿನ್ ಹಗರಣದ ಕಿಂಗ್ಪಿನ್ ಹ್ಯಾಕರ್ ಶ್ರೀಕಿ ಜೊತೆಗಿನ ನಂಟು ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಈ ದಾಳಿ ನಡೆದಿದೆ.
ತಂದೆಯ ಮಂತ್ರಿ ಸ್ಥಾನಕ್ಕೆ ಅಡ್ಡಿಯಾಗಲು ಸಂಚು?
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಲಪಾಡ್, “ಈ ದಾಳಿ ಕೇವಲ ರಾಜಕೀಯ ಪ್ರೇರಿತ. ನಮ್ಮ ತಂದೆ ಎನ್.ಎ. ಹ್ಯಾರಿಸ್ ಅವರು ಸಚಿವ ಸ್ಥಾನ ಪಡೆಯುವುದನ್ನು ತಡೆಯಲು ಈ ಸಂಚು ರೂಪಿಸಲಾಗಿದೆ. ತಂದೆಯವರ ಮನೆಯಲ್ಲೇ ನಾವು ವಾಸವಿರುವುದರಿಂದ ಅವರ ಮೇಲೂ ಗೂಬೆ ಕೂರಿಸುವ ಕೆಲಸವಾಗುತ್ತಿದೆ. ಆದರೆ ಈ ತನಿಖೆಗೂ ಅವರಿಗೂ ಯಾವುದೇ ಸಂಬಂಧವಿಲ್ಲ” ಎಂದು ಸ್ಪಷ್ಟಪಡಿಸಿದರು.
ಅಕ್ರಮ ಹಣದ ಆರೋಪಕ್ಕೆ ನಲಪಾಡ್ ಉತ್ತರ
ನಲಪಾಡ್ ಸಹೋದರರು ಬಿಟ್ಕಾಯಿನ್ ಹಗರಣದ ಹಣವನ್ನು ಬಳಸಿ ವಿದೇಶಿ ಪ್ರವಾಸ, ಐಷಾರಾಮಿ ಹೋಟೆಲ್ ವಾಸ್ತವ್ಯ ಹಾಗೂ ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪಗಳ ಕುರಿತು ಉತ್ತರಿಸಿದ ಅವರು, “ನನ್ನ ಮನೆಯಲ್ಲಿ ಅಧಿಕಾರಿಗಳಿಗೆ ಸಿಕ್ಕಿದ್ದು ಕೇವಲ ಎರಡು ಮೊಬೈಲ್ ಫೋನ್ಗಳು ಮಾತ್ರ. ಒಂದು ರೂಪಾಯಿ ಅಕ್ರಮ ಹಣವಾಗಲಿ ಅಥವಾ ದಾಖಲೆಗಳಾಗಲಿ ಪತ್ತೆಯಾಗಿಲ್ಲ. 2021ರ ಪ್ರಕರಣವನ್ನು ಈಗ ಕೆದಕುತ್ತಿರುವುದು ಯಾಕೆ?” ಎಂದು ಪ್ರಶ್ನಿಸಿದರು.
ಶ್ರೀಕಿ ಜೊತೆಗಿನ ನಂಟು ಮತ್ತು ಮನಿ ಟ್ರಯಲ್
ಹ್ಯಾಕರ್ ಶ್ರೀಕಿ ಮತ್ತು ನಲಪಾಡ್ ಕುಟುಂಬದ ನಡುವಿನ ಹಳೆಯ ಸ್ನೇಹವೇ ಈಗ ಇಡಿ ದಾಳಿಗೆ ಮೂಲ ಕಾರಣ ಎನ್ನಲಾಗಿದೆ. ಮೂಲಗಳ ಪ್ರಕಾರ, ಶ್ರೀಕಿ ಹ್ಯಾಕಿಂಗ್ ಮೂಲಕ ಗಳಿಸಿದ ಹಣದ ಒಂದು ಭಾಗ ನಲಪಾಡ್ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗಿರುವ ಶಂಕೆಯಿದೆ. ಹ್ಯಾಕಿಂಗ್ ಮೂಲಕ ಬಂದ ಹಣವನ್ನು ಐಷಾರಾಮಿ ಜೀವನಕ್ಕೆ ಬಳಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಇಡಿ ಈಗ ಆಳವಾದ ತನಿಖೆ ಕೈಗೊಂಡಿದೆ.
ರಾಜಕೀಯ ವಾಕ್ಸಮರ
ಇಡಿ ದಾಳಿಯನ್ನು ಕಾಂಗ್ರೆಸ್ ನಾಯಕರು “ಬಿಜೆಪಿಯ ಕೈಗೊಂಬೆ ಆಟ” ಎಂದು ಟೀಕಿಸಿದರೆ, ಬಿಜೆಪಿ ನಾಯಕರು ಇದು “ಭ್ರಷ್ಟಾಚಾರದ ವಿರುದ್ಧದ ಸಾಂವಿಧಾನಿಕ ಕ್ರಮ” ಎಂದು ಸಮರ್ಥಿಸಿಕೊಂಡಿದ್ದಾರೆ. ಈ ಪ್ರಕರಣ ಈಗ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.
Recent Articles
CSK ತಂಡಕ್ಕೆ ಭಾರಿ ಆಘಾತ: ಆಯುಷ್ ಮ್ಹಾತ್ರೆ ಐಪಿಎಲ್ 2026 ರಿಂದ ಔಟ್!
ಬೆಂಗಳೂರು: ಪ್ರಪೋಸಲ್ ನೆಪದಲ್ಲಿ ಪ್ರಿಯಕರನ ಜೀವಂತ ದಹನ! ಮದುವೆಗೆ ನಿರಾಕರಿಸಿದ್ದಕ್ಕೆ ಕಿರಣ್ನನ್ನು ಕೊಂದ ಪ್ರೇರಣಾ.