ನೆಲಮಂಗಲದಲ್ಲಿ ಬಾಡಿಬಿಲ್ಡರ್ ದುರಂತ ಅಂತ್ಯ: ವಿವಾಹಿತ ಮಹಿಳೆಯ ‘ಬ್ಲ್ಯಾಕ್ಮೇಲ್’ ತಂತ್ರಕ್ಕೆ ಬಲಿಯಾದ ಜಿಮ್ ಟ್ರೈನರ್? ಬೆಚ್ಚಿಬೀಳಿಸುವ ವಿಡಿಯೋ ಕಾಲ್ ರಹಸ್ಯ!
ವರದಿಗಾರರು (Reporter)
Hemanth Rajashekar12:37 AM IST

ನೆಲಮಂಗಲ: ಸುಂದರ ಮೈಕಟ್ಟು, ರಾಜ್ಯಮಟ್ಟದ ಸಾಧನೆಯ ಕನಸು ಹೊತ್ತಿದ್ದ ಆ ಬಾಡಿಬಿಲ್ಡರ್ ಬದುಕು ಈಗ ಕೇವಲ ಕಂಬನಿ ಮಿಡಿಯುವ ಕಥೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವಜ್ರಹಳ್ಳಿಯಲ್ಲಿ ನಡೆದ ಜಿಮ್ ಟ್ರೈನರ್ ದಿಲೀಪ್ (28) ಆತ್ಮಹತ್ಯೆ ಪ್ರಕರಣ ಈಗ ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಒಬ್ಬ ವಿವಾಹಿತ ಮಹಿಳೆಯ ಮಾನಸಿಕ ಕಿರುಕುಳ ಮತ್ತು ಬ್ಲ್ಯಾಕ್ಮೇಲ್ ತಂತ್ರಕ್ಕೆ ನೊಂದು ಯುವಕ ಪ್ರಾಣ ಕಳೆದುಕೊಂಡಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನಡೆದಿದ್ದೇನು? ಪ್ರೀತಿ ಎಂಬ ಬಲೆಯಲ್ಲಿ ಸಿಲುಕಿದ ಬಾಡಿಬಿಲ್ಡರ್!
ಮೃತ ದಿಲೀಪ್ ಕಳೆದ ಎರಡು ವರ್ಷಗಳಿಂದ ಸ್ಥಳೀಯ ಜಿಮ್ ಒಂದರಲ್ಲಿ ಟ್ರೈನರ್ ಆಗಿ ಕೆಲಸ ಮಾಡುತ್ತಿದ್ದರು. ಇದೇ ಜಿಮ್ಗೆ ಬರುತ್ತಿದ್ದ 42 ವರ್ಷದ ವಿವಾಹಿತ ಮಹಿಳೆಯೊಬ್ಬರ ಪರಿಚಯ ದಿಲೀಪ್ಗೆ ಆಗಿತ್ತು. ಈ ಪರಿಚಯ ಮುಂದೆ ಸ್ನೇಹಕ್ಕೆ ತಿರುಗಿ, ಇಬ್ಬರ ನಡುವೆ ಅನೈತಿಕ ಸಂಬಂಧ ಬೆಳೆದಿತ್ತು ಎನ್ನಲಾಗಿದೆ. ಆದರೆ, ಈ ಸಂಬಂಧವೇ ದಿಲೀಪ್ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸಿದೆ.
ಆಸ್ತಿಗಾಗಿ ಪೀಡನೆ: ಕುಟುಂಬಸ್ಥರ ಗಂಭೀರ ಆರೋಪ
ದಿಲೀಪ್ ಕುಟುಂಬಸ್ಥರು ನೀಡಿರುವ ದೂರಿನ ಪ್ರಕಾರ, ಆ ಮಹಿಳೆ ದಿಲೀಪ್ಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಳು. “ನಿನ್ನ ಹೆಸರಿನಲ್ಲಿರುವ ಮನೆಯನ್ನು ನನ್ನ ಮಗನ ಹೆಸರಿಗೆ ವರ್ಗಾಯಿಸು” ಎಂದು ಆಕೆ ಒತ್ತಡ ಹೇರುತ್ತಿದ್ದಳು ಎಂದು ದಿಲೀಪ್ ತಂದೆ ರಮೇಶ್ ಆರೋಪಿಸಿದ್ದಾರೆ. ಕಳೆದ ಒಂದು ವರ್ಷದ ಹಿಂದೆಯೇ ಈ ವಿಚಾರವಾಗಿ ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯಿತಿ ನಡೆದಿತ್ತು. ಆಗ ಮಹಿಳೆ ಮತ್ತು ಆಕೆಯ ಪತಿ ಇನ್ನು ಮುಂದೆ ದಿಲೀಪ್ ಜೊತೆ ಸಂಪರ್ಕ ಇಟ್ಟುಕೊಳ್ಳುವುದಿಲ್ಲ ಎಂದು ಲಿಖಿತವಾಗಿ ಬರೆದುಕೊಟ್ಟಿದ್ದರು. ಆದರೂ ಕಿರುಕುಳ ಮಾತ್ರ ನಿಂತಿರಲಿಲ್ಲ.
ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣು!
ಶನಿವಾರ ರಾತ್ರಿ ಸುಮಾರು 11:15ಕ್ಕೆ ಮನೆಗೆ ಮರಳಿದ ದಿಲೀಪ್, ನೇರವಾಗಿ ತನ್ನ ಕೋಣೆಗೆ ಹೋಗಿದ್ದಾರೆ. ಅಲ್ಲಿಂದ ಮಹಿಳೆಗೆ ವಿಡಿಯೋ ಕಾಲ್ ಮಾಡಿದ ದಿಲೀಪ್, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಫ್ಯಾನ್ಗೆ ನೇಣು ಕುಣಿಕೆ ಬಿಗಿಯುವ ದೃಶ್ಯವನ್ನು ವಿಡಿಯೋದಲ್ಲಿ ತೋರಿಸಿ ಪ್ರಾಣ ಕಳೆದುಕೊಂಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಆ ಮಹಿಳೆ ದಿಲೀಪ್ ಸಹೋದರಿಗೆ ಇನ್ಸ್ಟಾಗ್ರಾಮ್ನಲ್ಲಿ ಸಂದೇಶ ಕಳುಹಿಸಿ, “ನಿಮ್ಮಣ್ಣನನ್ನ ಕಾಪಾಡಿಕೊಳ್ಳಿ” ಎಂದು ತಿಳಿಸಿದ್ದಾಳೆ. ಮನೆಯವರು ಬಾಗಿಲು ಮುರಿದು ನೋಡುವಷ್ಟರಲ್ಲಿ ದಿಲೀಪ್ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಪೊಲೀಸ್ ತನಿಖೆ ತೀವ್ರ
ಪ್ರಕರಣ ದಾಖಲಿಸಿಕೊಂಡಿರುವ ನೆಲಮಂಗಲ ಟೌನ್ ಪೊಲೀಸರು ದಿಲೀಪ್ ಅವರ ಐಫೋನ್ ಅನ್ನು ವಶಪಡಿಸಿಕೊಂಡಿದ್ದಾರೆ. ಕಾಲ್ ರೆಕಾರ್ಡ್ಸ್ ಮತ್ತು ಚಾಟ್ಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ. ಸಾಧನೆ ಮಾಡಬೇಕಿದ್ದ ಯುವಕನೊಬ್ಬ ಇಂತಹ ಬಲೆಗೆ ಬಿದ್ದು ಪ್ರಾಣ ಕಳೆದುಕೊಂಡಿರುವುದು ಸ್ಥಳೀಯರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
Recent Articles
ಬೆಂಗಳೂರಿಗರಿಗೆ ಬಿಗ್ ಶಾಕ್: ಪೀಣ್ಯ ಫ್ಲೈಓವರ್ 100 ಗಂಟೆ ಬಂದ್! ಸಂಚಾರ ದಟ್ಟಣೆಯ ನರಕಯಾತನೆಗೆ ಸಜ್ಜಾಗಿ.